ಪೂರ್ಣಚಂದ್ರ ತೇಜಸ್ವಿ ಎಂಬ ಪರಿಸರದ ಕೂಸು


ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
 (8 ಸಪ್ಟೆಂಬರ್‌ 1938 - 5 ಎಪ್ರಿಲ್‌ 2007)
                         ಮನುಷ್ಯ ಮತ್ತು ಪ್ರಕೃತಿ ಎಂಬುದು ಸೃಷ್ಟಿಯ ಎರಡು ಜೀವಗಳಾದರೆ; ಒಂದು ತಾಯಿ ಮತ್ತೊಂದು ಮಗು. ಹೇಗೆ ಒಂದು ಮಗುವಿಗೆ ತಾಯಿಯ ಅವಶ್ಯಕವೋ, ಅದೇ ರೀತಿ ಮನುಷ್ಯನಿಗೆ ಪ್ರಕೃತಿಯ ಸಂಪೂರ್ಣ ಆಧಾರ ಬೇಕೇ ಬೇಕು. ಆದರೇ, ಈ ಸಂಬಂಧವನ್ನು ಇನ್ನಷ್ಟು ಹತ್ತಿರ ಸೆಳೆದ ಏಕಮಾತ್ರ ವ್ಯಕ್ತಿಯೆಂದರೆ ರಾಷ್ಟ್ರಕವಿ ಕುವೆಂಪುರವರ ಪುತ್ರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಕಾಲೇಜು ದಿನದ ಬಿಡುವಿನ ವೇಳೆಯಲ್ಲಿ ಸಾಹಿತ್ಯೇತರ ವಿದ್ಯಾರ್ಥಿಯಾಗಿ ವಾಚನಾಲಯದಲ್ಲಿ ಕೆಲವೊಂದು ಪುಸ್ತಕಗಳನ್ನು ಹುಡುಕುತ್ತಿದ್ದ ನನಗೆ ಗಮನಸೆಳೆದ ಮತ್ತು ತದನಂತರ ಸಾಹಿತ್ಯದ ಮತ್ತಷ್ಟು ಆಳವನ್ನು ತೋಡುವಂತಹ ಆಕರ್ಷಣೆ ನೀಡಿದ ಕನ್ನಡದ ಕವಿ, ವಿಜ್ಞಾನಿ, ಪರಿಸರ ಪ್ರೇಮಿ. ಹೌದು ಅವರ ಬರವಣಿಗೆಯ ಶೈಲಿಯೇ ಹಾಗಿತ್ತು, ಕೇವಲ ಅವರ ಪುಸ್ತಕಗಳೇ ನನ್ನನ್ನು ಅವರತ್ತ ಮತ್ತು ಅವರ ಪ್ರಕೃತಿ ಪ್ರೇಮದ ಕಡೆ ಸೆಳೆಯುವಂತೆ ಮಾಡಿತ್ತು. ನಂತರದಲ್ಲಿ ತೇಜಸ್ವಿಯವರ ಮತ್ತು ಅವರ ಬರವಣಿಗೆಗಳ ಅಭಿಮಾನಿಯಾದ ನಾನು ಆ ದಿನಗಳಲ್ಲಿ ಓದಿದ ಅವರ ಬರವಣಿಗೆಗಳ ಬಗ್ಗೆ ಕೆಲವೊಂದು ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ. 
                            ನವೋದಯ ಕವಿಗಳು ನಿಸರ್ಗವನ್ನು ದೈವದ ರೂಪದಲ್ಲಿ ಕಂಡರೆ ತೇಜಸ್ವಿ ಅದೇ ನಿಸರ್ಗವನ್ನು ಮನುಷ್ಯ ಸಾಧ್ಯತೆಯ ಹುಡುಕಾಟದ ಭಾಗವಾಗಿ ಭಾವಿಸಿ ಅದರ ವಿಸ್ಮಯ ವಿಕಾಸದ ಬೇರುಗಳನ್ನು ತನ್ನ ಸೃಜನಶೀಲತೆಯ ಕೇಂದ್ರವಾಗಿಸಿಕೊಂಡಿದ್ದರು. ಲೋಹಿಯಾ ತತ್ವಚಿಂತನೆಯಿಂದ ಪ್ರಭಾವಿತರಾದ ತೇಜಸ್ವಿ ಭಾರತೀಯ ಸಮಾಜವನ್ನು ಅದರ ಎಲ್ಲಾ ವಾಸ್ತವಗಳಿಂದ ಗ್ರಹಿಸಲು ಯತ್ನಿಸಿದ್ದರು. ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ವಿಜ್ಞಾನ ಮತ್ತು ಇತರ ಜ್ಞಾನಗಳನ್ನು ಸದಾ ಎಚ್ಚರದಿಂದ ನೋಡುತ್ತಿದ್ದ ತೇಜಸ್ವಿಯವರಿಗೆ ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಅಪಾರ ಕುತೂಹಲ ಇತ್ತು. ಈ ಕುತೂಹಲ, ಬೆರಗು ಮತ್ತು ಮುಗ್ದತೆಯನ್ನು ಕೊನೆಯವರೆಗೂ ಉಳಿಸಿಕೊಂಡಿದ್ದ ಅವರು ಜಗತ್ತನ್ನು, ಪರಿಸರವನ್ನು ಮತ್ತು ಮನುಷ್ಯನನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದರು. ಒಂದು ತುದಿಯಲ್ಲಿ ಆದ್ಯಾತ್ಮವನ್ನು ಇನ್ನೊಂದು ತುದಿಯಲ್ಲಿ ವಿಜ್ಞಾನವನ್ನಿಟ್ಟು ಎರಡರ ಮಿತಿಗಳನ್ನು ಅರಿಯುವ ಪ್ರಬುದ್ದತೆ ಅವರಲ್ಲಿತ್ತು. ಅಗಾಧ ವಿಶ್ವದ ಹಿನ್ನಲೆಯಲ್ಲಿ ಮನುಷ್ಯನ ಅಸ್ತಿತ್ವದ ಪ್ರಶ್ನೆಯನ್ನು ಎತ್ತುತ್ತಿದ್ದ ತೇಜಸ್ವಿಯವರು ಈ ನೆಲದ ವಾಸ್ತವವನ್ನು ಮರೆಯದೆ ತಮ್ಮ ಚಿಂತನೆಯ ದಿಕ್ಕನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು. ಸಮಸ್ತ ಜೀವರಾಶಿಯನ್ನು ಇಡಿಯಾಗಿ ಪರಿಶೀಲಿಸುತ್ತಾ ಅದರ ಕೇಂದ್ರದಲ್ಲಿ ಮನುಷ್ಯನನ್ನು ಇಟ್ಟು ನೋಡಿದರು. ಮಲೆನಾಡಿನ ಮುಗ್ದ ಸಾಮಾನ್ಯರ ಒಳಗಿನ ಅಸಾಮಾನ್ಯ ನಿಸರ್ಗ ಕಲ್ಪನೆಗಳನ್ನು ಅವರ ಸಂಬಂಧಗಳನ್ನು ಅಲ್ಲಿನ ಪರಿಸರದ ಜೀವ ವೈವಿದ್ಯದ ಅನಂತ ಕೊಂಡಿಗಳನ್ನು ದಾರ್ಶನಿಕ ಲೌಕಿಕದ ಲಘು ದಾಟಿಯಲ್ಲಿ ತನ್ನ ಸುತ್ತಣ ಲೋಕವನ್ನು ಯಾವುದೇ ಮೋಹವಿಲ್ಲದೆ, ದಟ್ಟವಾದ ಜೀವನ ಪ್ರೀತಿಯಲ್ಲಿ, ನಿರುಮ್ಮಳವಾಗಿ ತನ್ನದೇ ಶೈಲಿಯಲ್ಲಿ ಹೇಳುತ್ತಿದ್ದುದು ಅಸಾಮಾನ್ಯವಾಗಿತ್ತು. ಅನಂತವಾದ ನಿಸರ್ಗವನ್ನು ತೇಜಸ್ವಿ ಯಾವುದೋ ಸಣ್ಣ ಪುಟ್ಟ ಪಾತ್ರಗಳ ಮೂಲಕ ನಿರೂಪಿಸುತ್ತಿದ್ದರ ಹಿಂದಣ ಮನಸ್ಥಿತಿಯನ್ನು ಅನೇಕರು ತಕ್ಕುದಾಗಿ ಗ್ರಹಿಸಿದಂತಿಲ್ಲ. ಸಾಮಾನ್ಯ ಮಂದಣ್ಣನ ಮೂಲಕವೆ ವಿಶ್ವ ಸೃಷ್ಟಿಯ ಕಥನವನ್ನು ಗ್ರಹಿಸುತ್ತಾ ಅದರ ಅನಂತವನ್ನು ಧ್ವನಿಸಲು ಯತ್ನಿಸಿದ ತೇಜಸ್ವಿಯ ಮನಸ್ಸು ಆರಾಧನೆಯನ್ನು ಮೀರಿದ ಸ್ಥತಿಯಲ್ಲಿ ಮಲೆನಾಡಿನ ಮಾಯಾಲೋಕವನ್ನು ಬಿಡಿಸುತ್ತಿತ್ತು. ದೂರದ ಊರಿನಿಂದ ಹಳ್ಳಿಯ ಕಡೆ ಪ್ರಕೃತಿ ಸೆಳೆದ ಅವರ ಗಮನ ಅಸದೃಶವಾಗಿತ್ತು. ತಂದೆಯು ಹಳ್ಳಿಯಿಂದ ಹೋಗಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನೆಲೆಸಿದರೆ, ಮಗನ ಮನಸ್ಸು ಹಳ್ಳಿಯ ಕಡೆ ಹರಿತಪಿಸುತ್ತಿತ್ತು. ‘ಯಾವ ಮೋಹನ ಮುರಳಿ ಕರೆಯಿತೋ’ ಎನ್ನುವ ಹಾಗೆ ಪ್ರಕೃತಿಯು ವಿಜಯ ಸಾಧಿಸಿಯೇ ಬಿಟ್ಟು ಅವರ ಅಂತರಾಳದಲ್ಲಿ ನೆಲೆಸಿತ್ತು. ಅಂದಿನಿಂದ ಪ್ರಕೃತಿಯ ಸೂಕ್ಷ್ಮತೆಯನ್ನು ಅರಿಯುತ್ತಾ ಹೋದ ಹಾಗೆ ಹೊಸ ಹೊಸ ವಿನೂತನ ಅಚ್ಚರಿಗಳು ಅವರ ಬದುಕಿನ ಅನುಭವದ ಮೂಲವಾದವು. ಅದಕ್ಕೆ ಅವರು ಬರೆದ ಬರಹಗಳೇ ಸಾಕ್ಷಿ.
                ತೇಜಸ್ವಿಯವರಿಗೆ ಶಿಕಾರಿಯೆಂದರೆ ಪಂಚಪ್ರಾಣ. ಬಿಡುವಿನ ವೇಳೆಯಲ್ಲಿ ಬಂದೂಕನ್ನು ಹೆಗಲಿಗೇರಿಸಿ ಹೊರಟೇ ಬಿಡುತ್ತಿದ್ದರು. ಕಾಡಿನ ಸಂಪರ್ಕದ ಮದ್ಯೆ ವಾಸಿಸುತ್ತಿದ್ದ ತೇಜಸ್ವಿಯವರು ವಿವಿಧ ಬಗೆಯ ಪ್ರಾಣಿಗಳ, ಪಕ್ಷಿಗಳ ಚಲನವಲನಗಳನ್ನು ಅತೀ ಸಮೀಪದಿಂದ ವೀಕ್ಷಿಸುತ್ತಿದ್ದುದು ಅವರ ಬರಹಗಳಲ್ಲೇ ಎದ್ದು ಕಾಣುತ್ತಿತ್ತು. ಬೇಟೆಯಿಂದಾಗಿ ಪ್ರಾಣಿ ಪಕ್ಷಿಗಳ ಸ್ವಭಾವ ಹಾಗೂ ಅವುಗಳ ವೈಶಿಷ್ಟಗಳನ್ನು ಅರ್ಥ ಮಾಡಿಕೊಂಡಿದ್ದರು. ಹಾಗಾಗಿಯೇ ಅವರು ತಮ್ಮ ಕೃತಿಗಳಲ್ಲಿ ಶಿಕಾರಿಯ ವಿಶಿಷ್ಟ ಅನುಭವಗಳನ್ನು ಸಹಜವಾಗಿಯೇ ನಿರೂಪಿಸುತ್ತಿದ್ದರು. ಅವರೇ ಹೇಳುತ್ತಿದ್ದಂತೆ ಶಿಕಾರಿಯೆಂದರೆ ಒಂದು ಸಾವು ಬದುಕಿನ ಹೋರಾಟ. ಇಡೀ ಮಾನವನ ಬದುಕಿನ ಪರಿಯೇ ಬೇಟೆಯೆಂದು ಅರ್ಥೈಸುತ್ತಿದ್ದರು. ಅವರು ಪ್ರಕೃತಿ ಸೌಂದರ್ಯ, ಪರಿಸರ ವಿನಾಶ, ಜಗತ್ತಿನ ನಿಗೂಢತೆ, ಮನುಷ್ಯನ ವೈಫಲ್ಯ, ನಿರಂತರ ಹೋರಾಟ ಮುಂತಾದುವುಗಳನ್ನು ತಮ್ಮ ಬರಹದ ಬದುಕಿನಲ್ಲಿ ಅಳವಡಿಸಿಕೊಂಡು ಕೃತಿಯಿಂದ ಕೃತಿಗೆ ಬೆಳೆಯ ಹೋದವರು.
                          ತೇಜಸ್ವಿಯವರ ಸಂವೇದನಾಶೀಲ ವ್ಯಕ್ತಿತ್ವಕ್ಕೂ ಕಾಡಿನ ನಿಗೂಢ ವಿಸ್ಮಯಕ್ಕೂ ಅಂತಹ ದೊಡ್ಡ ವ್ಯತ್ಯಾಸವಿರಲಿಲ್ಲ. ಜೀವ ಜಾಲದ ವೈವಿಧ್ಯ ರೂಪ ರಾಶಿಯನ್ನು ತೇಜಸ್ವಿ ಮಾತ್ರ ಕನ್ನಡದಲ್ಲಿ ತಮ್ಮ ಸೃಜನಶೀಲ ನಿರೂಪಣೆಗಳಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಮನುಷ್ಯನ ಜಾಡನ್ನು ಅವರು ನಿಸರ್ಗದ ಅನುಭವದಿಂದ ಪರಿಶೀಲಿಸಿದರು. ತೇಜಸ್ವಿ ಅವರು ಎಂದೂ ಪರಿಸರದ ಹೊರ ಮೈಯನ್ನು ಭಾವಿಸದೆ ಅದರ ಅಂತರಾಳದ ಮೂಲಕ ಮನುಷ್ಯ ಪರಿಸರದ ದ್ವಂದ್ವಗಳನ್ನು ವಿಕಾಸದ ವ್ಯಕ್ತಿ ವಿಶಿಷ್ಟ ಕಾಣ್ಕೆಗಳಿಂದ ಅರ್ಥೈಸಲು ಯತ್ನಿಸಿದರು. ತೇಜಸ್ವಿಯ ಸೃಜನಶೀಲತೆಯ ತಳದಲ್ಲಿದ್ದುದು ನಿಗೂಢ ಮನುಷ್ಯ ಮತ್ತು ಅವನ ಅಸ್ತಿತ್ವಕ್ಕೆ ನೆಲೆಯಾಗಿದ್ದ ನಿಸರ್ಗ. ನಿಸರ್ಗವನ್ನು ತೇಜಸ್ವಿ ಕೇವಲ ಪರಿಸರವಾದಿಯ ಕಾಳಜಿಯಿಂದ ಕಂಡವರಲ್ಲ. ನಿಸರ್ಗವು ತೇಜಸ್ವಿಗೆ ವಿಸ್ಮಯ ನಿಗೂಢ ವಾಗಿ ಕಂಡಿತ್ತಾದರೂ ಇಡಿಯಾಗಿ ಅವರು ಈ ನಿಸರ್ಗವನ್ನು ಅಖಂಡವಾದ ಜೀವ ವಿಕಾಸದ ಅನಂತ ಯಾತ್ರೆಯಾಗಿಯೇ ಕಂಡಿದ್ದರು. ಹಾಗಿದ್ದರೂ ನಿಸರ್ಗವನ್ನು ಅವರು ಕೇವಲ ಅಮೂರ್ತವಾದ ದಿವ್ಯತೆಯಲ್ಲಿ ಹುಡುಕುತ್ತಿರಲಿಲ್ಲ. ವಿಶ್ವದ ಸೃಷ್ಟಿಯ ಜಾಡು ಹುಡುಕಲು ತೇಜಸ್ವಿಯವರು ತಮ್ಮ ಪ್ರತಿಯೊಂದು ಬರಹದಲ್ಲೂ ತೊಡಗಿದ್ದುದನ್ನು ಕಾಣಬಹುದು. ಇಂತಹ ಪ್ರಜ್ಞೆ ಅವರಿಗೆ ಬಂದದ್ದು ಸಹಜವಾಗಿಯೇ ಕುವೆಂಪು ಅವರ ಮೂಲಕ ಸಾಧ್ಯವಾಗಿತ್ತಾದರೂ ಸ್ವತಃ ತೇಜಸ್ವಿಯವರ ಪ್ರವೃತ್ತಿಯನ್ನು ಗಾಡವಾಗಿ ರೂಪಿಸಿರುವುದು ಮಲೆನಾಡಿನ ವಿಸ್ಮಯ ಜೀವ ಜಾಲದ ಪರಿಯೇ ಆಗಿತ್ತೆಂಬುದು ಮುಖ್ಯ.
            ತೇಜಸ್ವಿ ಬರಿಯ ಪರಿಸರ ವಿಜ್ಞಾನಿ ಆಗಿದ್ದರೆ ಅವರ ಬರಹಗಳಿಗೆ ಅಂತಹ ಮಹತ್ವವೇನೂ ಇರುತ್ತಿರಲಿಲ್ಲವೇನೋ. ಮಿಗಿಲಾಗಿ ಅವರು ನಿಸರ್ಗದ ಸಂತನಾಗಿದ್ದುಕೊಂಡೇ ಅದರ ಅಂತರಾಳವನ್ನು ಕೆದಕಿ ತಿರುಳನ್ನು ತಿಳಿವ ಆಧುನಿಕ ಪ್ರಜ್ಞೆಯ ವಿಜ್ಞಾನಿಯೂ ಆಗಿದ್ದರು. ಹೀಗಾಗಿಯೇ ಅವರ ಸೃಜನಶೀಲತೆಯು ಯಾವ ಅಂಕುಶಗಳಿಗೂ ಒಳಗಾಗದೆ ಆಕಾಶದ ವಿಸ್ಮಯ ವಿಸ್ತಾರವನ್ನೂ ಭೂಮಿಯ ಆಳದ ಸಾರವನ್ನು ಅಂತೆಯೇ ತನ್ನ ಸುತ್ತಣ ಪರಿಸರದ ದಟ್ಟವಾದ ರೂಪ ವಿರೂಪಗಳ ನಿಜ ಮತ್ತು ಹುಸಿಯನ್ನು ಯಾವ ಬೇಧಗಳಿಲ್ಲದೆ ಅಳವಡಿಸಿಕೊಂಡಿತ್ತು. ನಿಸರ್ಗವು ಕುವೆಂಪು ಅವರಿಗೆ ಅಮರತ್ವದ ಸಂಕೇತವಾದರೆ ತೇಜಸ್ವಿಗೆ ಅದೇ ನಿಸರ್ಗವು ಜೀವಜಾಲದ ಬಿಡಿ ಬಿಡಿ ರೂಪಕವಾಗಿ ಕಂಡಿತ್ತು. ಅಣುವಿನಿಂದ ಅನಂತವನ್ನು ಅಳೆಯುವ ಕೆಲಸವನ್ನು ತೇಜಸ್ವಿ ಮಾಡುತ್ತಿದ್ದರೆ ವಿನಃ ಅನಂತತೆಯಿಂದ ಅಣುವಿನ ಅಳತೆ ಮಾಡುತ್ತಿರಲಿಲಲ್ಲ. ಅಗಾಧತೆಯ ಮೂಲಕ ಜಗತ್ತನ್ನು ಅಳೆಯುವುದು ನವೋದಯದವರ ಕ್ರಮವಾದರೆ, ತೇಜಸ್ವಿಯವರ ಮನೋಧರ್ಮ ಬೇರೆಯೇ ಆಗಿತ್ತು. ಸಣ್ಣ ಹುಳು ಹುಪ್ಪಟೆ, ಪ್ರಾಣಿ ಪಕ್ಷಿ, ಯಾವುದೋ ಕಾಡಿನ ಮರೆಯ ನಿಗೂಢ ಮನುಷ್ಯರ ಮೂಲಕ, ಅಲ್ಲಿ ದಿನಗಟ್ಟಲೆ ಸುರಿವ ಮಳೆಯಿಂದ, ಜುಗಾರಿ ಕ್ರಾಸಿನ ವ್ಯವಹಾರಗಳಿಂದ ಮುಂತಾದ ಪ್ರಾದೇಶಿಕವಾಗಿ ಇರುವಂತಹ ಪರಿಸರವನ್ನು ಅರಿಯುವ ಮನೋಧರ್ಮ ಅವರದಾಗಿತ್ತು. ಅವರೊಬ್ಬ ಪರಿಸರ ಪ್ರೇಮಿಯಾದ್ದರಿಂದಲೇ ಪ್ರಕೃತಿಯ ಒಡಲಲ್ಲೇ ಜೀವ ಸವೆಸಿದ್ದು, ಹೀಗಾಗಿ ಅವರ ಬರಹದಲ್ಲಿ ಮಲೆನಾಡಿನ ದಟ್ಟ ಅನುಭವಗಳಾಗಿ ಆಗಾಗ ಬರುತ್ತಲೇ ಇರುತ್ತವೆ. ತೇಜಸ್ವಿಯವರ ಸಾಹಿತ್ಯದಲ್ಲಿ ಕಾಣುವ ವಿಶಿಷ್ಟ ಗುಣವೆಂದರೆ ಪ್ರಕೃತಿಯ ಭವ್ಯ ದೃಶ್ಯ ಸೌಂದರ್ಯಗಳ ಮುಂದೆ ಮಗು ಸಹಜ ಕುತೂಹಲ, ಅಪ್ಪಟ ಮುಗ್ದತೆಗಳು. ತೇಜಸ್ವಿ ಅವರಿಗೆ ಮನೆಗಿಂತ ಕಾಡು ನದಿ, ಬೆಟ್ಟ, ಗುಡ್ಡ, ಕೊಳ, ಅಲ್ಲಿ ಈಜಾಡುವ ಮೀನುಗಳು, ಅದನ್ನು ಹಿಡಿವ ತಂತ್ರಗಾರಿಕೆ ಇವೆಲ್ಲ ಹೆಚ್ಚು ಇಷ್ಟವಾಗಿ ಕಾಣುತ್ತಿದ್ದುದು ಅವರೊಬ್ಬ ನಿಷ್ಠುರ ಪರಿಸರ ಆರಾಧಕರಾಗಿದ್ದರಿಂದಲೇ. ಎಂ.ಎ ಮುಗಿಸಿದ ಬಳಿಕ ಅವರು ಸರ್ಕಾರಿ ನೌಕರಿಯನ್ನು ತಿರಸ್ಕರಿಸಿ ಕೃಷಿ ಜೀವನವನ್ನು ಆಯ್ಕೆ ಮಾಡಿಕೊಂಡು ಆ ಕೃಷಿ ಬದುಕೇ ಅವರ ಪ್ರಯೋಗಶೀಲತೆಗೆ ಕಾರಣ. ಕೃಷಿಕರಾಗಿದ್ದರಿಂದ ಅವರ ಸಾಹಿತ್ಯದಲ್ಲಿ ಕೃಷಿಗೆ ಸಂಬಂಧಿಸಿದ ಅನೇಕ ವಿವರಗಳು ಕಂಡು ಬರುತ್ತವೆ. ಕಾಫಿ, ಏಲಕ್ಕಿ, ಬೇಸಾಯ, ಜೇನುಕೃಷಿ, ಬೆಳೆಗಳಿಗೆ ಬರುವ ರೋಗಗಳು, ಅವುಗಳಿಗೆ ನೀಡುವಂತಹ ಔಷದಿಗಳ ವಿವರಗಳು ಅವರ ಸಾಹಿತ್ಯದಲ್ಲಿ ಪದೇ ಪದೇ ಇಣುಕುತ್ತಿದ್ದದು ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದ ಕೃಷಿಯಿಂದಲೇ. ವಿನಾಶದ ಅಂಚಿನಲ್ಲಿರುವ ಕಾಡು, ಜೀವಿಗಳು, ಅದಕ್ಕೆ ಕಾರಣಗಳು ಎಲ್ಲವನ್ನೂ ತೇಜಸ್ವಿಯವರು ತಮ್ಮ ಕೃತಿಯಲ್ಲಿ ಸವಿವರವಾಗಿ ಚಿತ್ರಿಸಿದ್ದೂ ಇದೇ ಕಾರಣದಿಂದಲೇ.

                 ತೇಜಸ್ವಿ ನಮ್ಮ ಈ ಲೋಕದ ಒಳಗಿದ್ದುಕೊಂಡೇ ಇನ್ನೊಂದು ಲೋಕದ ಯಾನದಲ್ಲಿರುತ್ತಿದ್ದರು. ಹಾಗಾಗಿಯೇ ಪುಟ್ಟ ಹಕ್ಕಿಯ ಜೀವನ, ಯಾವುದೋ ಕಾಡುಮಿಕದ ಜಾಡು, ಎಲ್ಲಿಯದೋ ಉಡವೊಂದರ ಪ್ರಹಸನ, ಯಾವುದೋ ಊರಿನ ಹಾವಾಡಿಗನ ಪವಾಡ, ಅಂತೆಯೇ ಎಲ್ಲಿಯೋ ಇದ್ದು ಎಲ್ಲೊ ಮಾಯವಾಗುವ ಗಾರೆಕೆಲಸದವನು ಮತ್ತು ನಿಗೂಢವಾಗಿ ಪೈಶಾಚಿಕ ಜಗತ್ತಿನ ಪ್ರತಿರೂಪಕದಂತೆ ಕಾಡಿನ ನಿಗೂಢದ ಮರೆಯಲ್ಲಿ ಬದುಕುವ ಕುಟುಂಬಗಳೆಲ್ಲವೂ ಇರುವ ಲೋಕದ ಹಂಗು ಕಳೆದುಕೊಂಡು ವಿಹರಿಸುವ ಜೀವನ ವಿಧಾನವಾಗಿ ಕಾಣುತ್ತದೆ. ಅಲ್ಲದೆ ಇಂತಹ ಮಾಯಾಲೋಕದ ಸಮಗ್ರ ಕ್ರಮವನ್ನು ಮೀರಿ ನಮ್ಮ ಅರಿವಿಗೆ ಬಾರದೆ ಪ್ರತ್ಯೇಕವಾಗಿರುವಂತೆ ವಿವರಣೆಗೆ ಸಾಧ್ಯವಾಗದ ಪ್ರತಿಲೋಕವನ್ನು ವಿವರಿಸುವುದರಲ್ಲಿ ತೇಜಸ್ವಿ ಮೋಡಿ ಮಾಡಿ ಬಿಡುತ್ತಿದ್ದರು. ಇದು ಶುದ್ಧ ವಿಜ್ಞಾನಿಯ ಅರ್ಥಪಂಜರದ ನಿರೂಪಣೆಯಾಗದೆ ವಿಕಾಸ ಕಥನದ ನಿರೂಪಣೆಯಾಗುವ ಪರಿ. ಇದರಿಂದಾಗಿಯೇ ತೇಜಸ್ವಿಯ ಒಟ್ಟು ಬರಹ ನಾಗರೀಕತೆಯ ಅಧಿಕಾರದ ಕಥನವಾಗದೆ ನಿಸರ್ಗದ ವಿಕಾಸದ ವಿಸ್ಮಯ ಬೆಳೆಯಾಗಿ ಯಾರದೇ ಅಂತರಂಗವನ್ನು ತಟ್ಟುವಂತಿತ್ತು. ನಿಸರ್ಗದಲ್ಲಿ ರಮ್ಯ ಕವಿಯಾಗಿ ಕಳೆದುಹೋಗುವುದು ಸಹಜವೇ, ಆದರೆ ತೇಜಸ್ವಿ ರಮ್ಯ ಪರಂಪರೆಯಲ್ಲಿ ವಿಶ್ವಾಸವಿಟ್ಟಿರಲಿಲ್ಲ. ವರ್ತಮಾನದ ಕ್ಷುದ್ರ ಸಾಮಾಜಿಕ ಪರಿಸರ ಅವರ ಬರಹದಲ್ಲಿ ನಿಸರ್ಗದ ಸಾವಯವ ಸಂಬಂಧದಿಂದಲೇ ಅಭಿವ್ಯಕ್ತಿಯಾಗುತ್ತಿದ್ದದು ವಿಶೇಷವಾಗಿತ್ತು.
                              ತೇಜಸ್ವಿ ಅಖಂಡವಾಗಿ ಜಗತ್ತನ್ನು ಗ್ರಹಿಸಿದ್ದರೆ ವಿನಃ ಪೂರ್ವ, ಪಶ್ಚಿಮ ಪರಂಪರೆ ಮತ್ತು ಆಧುನಿಕತೆ ಎಂಬ ದ್ವಂದ್ವಗಳಿಂದಲ್ಲ. ಕವಿಯಲ್ಲದ ತೇಜಸ್ವಿ ತಮ್ಮ ನಿಗೂಢ ವಿಸ್ಮಯ ನಿರೂಪಣೆಯಿಂದಲೇ ನವ್ಯ ಕಾವ್ಯಕ್ಕೂ ಮೀರಿದ ಮನುಷ್ಯನ ವಿಕಾಸದ ಕಾವ್ಯವನ್ನು ನಿರೂಪಿಸಿದರು. ತನ್ನ ಅಸ್ತಿತ್ವಕ್ಕೆ ಮೂಲ ಕಾರಣವಾದ ಪರಿಸರದ ನಿಸರ್ಗನಿಷ್ಠೆ ವ್ಯವಸಾಯವೇ ಬರಹದ ಧಾತು ಎಂದು ತಿಳಿದಿದ್ದ ತೇಜಸ್ವಿ ಅವರಿಗೆ ಜಡವಾದ ಇಲ್ಲವೇ ಕೃತಕವಾದ ರೂಪಕಗಳ ಹಂಗಿರಲಿಲ್ಲ. ಅಂತಹ ಹಂಗನ್ನು ಅಭಿವ್ಯಕ್ತಿಸುವ ಒತ್ತಡದಲ್ಲಿದ್ದ ತೇಜಸ್ವಿ  ಬೇರೊಂದು ಹೆಸರನ್ನಿಟ್ಟುಕೊಂಡು ಒಂದೆರಡು ಕವಿತೆಗಳನ್ನು ಬರೆದದ್ದೂ ಇದೆ. ಅಂದರೆ ಪಶ್ಚಿಮದ ಕಾಣ್ಕೆಯನ್ನು ಸೀಳು ನೋಟವೆಂದು ಅದನ್ನು ನಿರಾಕರಿಸಿ ಆದರೆ ಅದರ ಅರಿವಿನ ಅಖಂಡ ತತ್ವವನ್ನು ತನ್ನ ಅಂತರಂಗದಲ್ಲಿ ಕರಗಿಸಿಗೊಂಡು ನಿರೂಪಿಸಿದ ಅವರ ಒಟ್ಟು ಬರಹವೇ ಹಸಿರು ಕಾವ್ಯ. ಇದನ್ನೇ ‘ಗ್ರೀನ್ ಡಿವೈನ್’ ಎಂತಲೂ ಕರೆಯಬಹುದು. ಈ ಹಸಿರು ದಿವ್ಯ ಕಥನದಲ್ಲಿ ತೇಜಸ್ವಿ ಮಲೆನಾಡಿನ ನಾಡಿಗಳನ್ನೇ ಜಗತ್ತಿನ ವಿಸ್ಮಯ ನಿರೂಪಕರನ್ನಾಗಿ ಮಾರ್ಪಡಿಸಿಕೊಂಡಿದ್ದರು. ಮಂದಣ್ಣ ಇಂತಹ ದಿವ್ಯ ಕಥನದ ನಿರೂಪಣೆಯ ದಿಕ್ಸೂಚಿ ಹಿಡಿದವನಾಗಿದ್ದ. ತೇಜಸ್ವಿಯ ಇಂತಹ ಹಸಿರು ದಿವ್ಯ ಕಥನವು ನವೋದಯ ಕವಿಗಳ, ಕವಿತೆಗಳ ಗ್ರಹಿಕೆಗಿಂತ ತುಂಬ ಭಿನ್ನವಾಗಿತ್ತು. ಸಾಮಾನ್ಯವಾಗಿ ತೇಜಸ್ವಿಯವರು ಯಾರಿಗೂ ಬೇಡವೆನಿಸಿದ, ಸಾಮಾನ್ಯವೆನಿಸಿದ ವಸ್ತುಸ್ಥಿತಿಯ ಮೂಲಕವೇ ವಿಶ್ವದ ಅನಂತತೆಯನ್ನು ಹುಡುಕುವ, ಅದರಿಂದಲೇ ಆ ಅಪಾರವಾದ ಜೀವ ಸಂಬಂಧದ ಕೊಂಡಿಯನ್ನು ಬೆಸೆಯುವ ಯತ್ನ ಮಾಡುತ್ತಿದ್ದರು. ತನ್ನ ಸುತ್ತಲ ಲೋಕದ ಎಲ್ಲಾ ದಂಧೆಗಳಿಂದ, ತನ್ನ ಸುತ್ತಲ ಲೋಕದ ಎಲ್ಲ ವಿಸ್ಮಯಗಳನ್ನು ಬಿತ್ತಿ ಬೆಳೆದು ಬೆಟ್ಟ ಸಾಲುಗಳ ಮಳೆಯ ದಾಳಿಗೆ ಸಿಲುಕಿ ಕರಗಿ ಕರಗಿ ಯಾವುದೋ ಕಣಿವೆ ಮರೆಗೆ ಅಂತಹ ಬೆಟ್ಟಗಳೇ ಜಾರಿ ಹೋಗುತ್ತಿರುವಂತೆ ಬರೆಯುತ್ತಿದ್ದರು.
                            ಮನುಷ್ಯನನ್ನು ಪ್ರಕೃತಿಯ ಒಂದು ಭಾಗವಾಗಿಯೇ ಪರಿಗಣಿಸಿದ ತೇಜಸ್ವಿಯವರಿಗೆ ಪ್ರಕೃತಿಯ ನಾಶ ಮತ್ತು ಮನುಷ್ಯನ ನಾಶ ಬೇರೆ ಬೇರೆಯಾಗಿ ಕಾಣಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ತೇಜಸ್ವಿಯವರನ್ನು ಒಬ್ಬ ಪರಿಸರದ ಕೂಸು ಎನ್ನುವುದಕ್ಕಿಂತ, ಪರಿಸರವೇ ತೇಜಸ್ವಿ ಅಥವಾ ತೇಜಸ್ವಿಯೇ ಪರಿಸರ ಎಂದು ಹೇಳುವುದು ಹಿತವೆನಿಸುತ್ತದೆ. ಏಕೆಂದರೆ ಪರಿಸರ ಮತ್ತು ತೇಜಸ್ವಿ ಎಷ್ಟು ಕುತೂಹಲವಾಗಿದ್ದರೆಂದರೆ ತೇಜಸ್ವಿಯವರು ಮಾಡುತ್ತಿದ್ದ ಒಂದೊಂದು ಅನ್ವೇಷ್ವಣೆಯಲ್ಲೂ ಹೊಸ ಅಚ್ಚರಿಯನ್ನು ಪರಿಸರವು ಮೂಡಿಸುತ್ತಿತ್ತು. ಆದರೆ ತೇಜಸ್ವಿಯವರನ್ನು ಅರ್ಥದ ಪಂಜರಕ್ಕೆ ಒಳಪಡಿಸುವುದು ಬೌದ್ಧಿಕ ಅಪರಾದ, ಹಾಗೆ ಮಾಡಿದಂತೆಲ್ಲ ಅವರ ಬರಹದ ಮಾಯಾಪಕ್ಷಿಗಳು ಅವರನ್ನು ರೆಕ್ಕೆ ಮೇಲೆ ಕೂರಿಸಿಕೊಂಡು ಹಾರಿ ಹೋಗುತ್ತವೆ. ಅಂತಹ ಬರಹದ ಮಾಯಾಲೋಕದಲ್ಲಿ ಕನ್ನಡ ನಾಡಿನ ಹೊಸ ಪೀಳಿಗೆಯನ್ನು ಮುಳುಗೇಳಿಸಿರುವ ತೇಜಸ್ವಿಯ ಅನನ್ಯ ಸೃಜನಶೀಲತೆಯು ಅನಂತತೆಯ ದಿಕ್ಕಿನದು. ಅದೇ ಹಾದಿಯಲ್ಲಿ ಹೊರಟು ಹೋಗಿರುವ ತೇಜಸ್ವಿ ನಮಗೆ ಯಾವತ್ತು ಬೇಕಾದ ಬರಹಗಳನ್ನು ಬಿಟ್ಟು ಹೋಗಿದ್ದಾರೆ. ಈ ಬರಹಗಳನ್ನು ಓದುವುದೇ ನಾವು ಅವರಿಗೆ ಕೊಡುವ ನಿಜವಾದ ಶೃದ್ಧಾಂಜಲಿ.


                     ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು......................


ದೀಕ್ಷಿತ್ ಕುಮಾರ್ ಪುತ್ತೂರು,
ಸಹಾಯಕ ಪ್ರಾಧ್ಯಾಪಕರು

deekshithkumarputtur@gmail.com

+91 9449216380


Comments

Post a Comment

Popular posts from this blog

Motivation Theories

Concept of Motivation